ಡೈಲಿ ವಾರ್ತೆ: 17/OCT/2023

ಷರತ್ತು ಪಾಲಿಸಿದ್ರೆ ಒತ್ತೆಯಾಳುಗಳ ಬಿಡುಗಡೆ: ಇಸ್ರೇಲ್‌ ಜೊತೆ ಸಂಧಾನಕ್ಕೆ ಮುಂದಾದ ಇರಾನ್‌

ಟೆಹರಾನ್‌: ಇಸ್ರೇಲ್-ಹಮಾಸ್‌ ಯುದ್ಧ 10ನೇ ದಿನಕ್ಕೆ ಕಾಲಿಟ್ಟ ಬೆನ್ನಲ್ಲೇ ಇರಾನ್‌ ಈಗ ಷರತ್ತು ವಿಧಿಸಿ ಸಂಧಾನ ಮಾಡಲು ಮುಂದಾಗಿದೆ.

ಗಾಜಾಪಟ್ಟಿ ಮೇಲೆ ಇಸ್ರೇಲ್‌ ನಡೆಸುತ್ತಿರುವ ಏರ್‌ಸ್ಟ್ರೈಕ್‌ ನಿಲ್ಲಿಸಿದರೆ ಇಸ್ರೇಲ್‌ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಪ್ರಯತ್ನ ನಡೆಸಲಾಗುವುದು ಎಂದು ಹೇಳಿದೆ.

ಟೆಹರಾನ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ನಾಸರ್ ಕನಾನಿ, ಗಾಜಾಪಟ್ಟಿ ಮೇಲೆ ಇಸ್ರೇಲ್ ತನ್ನ ವೈಮಾನಿಕ ದಾಳಿ ನಿಲ್ಲಿಸಿದರೆ ಹಮಾಸ್ ಒತ್ತೆಯಾಳಾಗಿ ಇಟ್ಟುಕೊಂಡಿರುವ ಇಸ್ರೇಲ್‌ ಪ್ರಜೆಗಳನ್ನು ಬಿಡುಗಡೆ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ಎಂದು ಹೇಳಿದ್ದಾರೆ.

ಹಮಾಸ್‌ ಉಗ್ರರಿಗೆ ನಾವು ಬೆಂಬಲ ನೀಡುವುದಿಲ್ಲ ಎಂದು ಇರಾನ್‌ ಹೇಳುತ್ತಾ ಬಂದಿದೆ. ಆದರೆ ಹಮಾಸ್‌ ಉಗ್ರರಿಗೆ ಶಸ್ತ್ರಾಸ್ತ್ರವನ್ನು ಇರಾನ್‌ ನೀಡಿದೆ ಎಂದು ಇಸ್ರೇಲ್‌ ನೇರವಾಗಿ ಹೇಳುತ್ತಾ ಬಂದಿದೆ.
ತನ್ನ ಮೇಲೆ 5000 ರಾಕೆಟ್‌ ಉಡಾವಣೆ ಮಾಡಿದ ಬೆನ್ನಲ್ಲೇ ಇಸ್ರೇಲ್‌ ಹಮಾಸ್‌ ಉಗ್ರರನ್ನು ಸಂಪೂರ್ಣ ನಾಶ ಮಾಡಲು ಪಣತೊಟ್ಟಿದೆ. ಗಾಜಾ ಪಟ್ಟಿಯ ಮೇಲೆ ಬಾಂಬ್‌ ದಾಳಿ ನಡೆಸಿ ಉಗ್ರರ ಸಂಹಾರ ಮಾಡುತ್ತಿದೆ. ಯುದ್ಧವನ್ನು ಹಮಾಸ್‌ ಆರಂಭಿಸಿದರೂ ಈ ಯುದ್ಧವನ್ನು ನಾವೇ ನಿಲ್ಲಿಸುತ್ತೇವೆ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಘೋಷಿಸಿದ್ದಾರೆ.