ಡೈಲಿ ವಾರ್ತೆ: 17/OCT/2023

ಶಿವಾಜಿಗೆ ಅವಮಾನ – ಠಾಣೆ ಮುಂದೆ ಜನ ಸೇರುತ್ತಿದ್ದಂತೆ ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್

ಯಾದಗಿರಿ: ಕಿಡಿಗೇಡಿಗಳು ಛತ್ರಪತಿ ಶಿವಾಜಿ ಮಹಾರಾಜರ ತಿರುಚಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಅವಮಾನ ಮಾಡಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

ದುಷ್ಕರ್ಮಿಗಳು ಛತ್ರಪತಿ ಶಿವಾಜಿ ಮಹಾರಾಜ್ ಹಾಗೂ ಟಿಪ್ಪು ಸುಲ್ತಾನ್ ಫೋಟೋಗಳನ್ನು ಬಳಸಿಕೊಂಡಿದ್ದಾರೆ. ಟಿಪ್ಪುವಿನ ಕಾಲ ಬುಡದಲ್ಲಿ ಶಿವಾಜಿ ಇರುವಂತೆ ಫೋಟೋ ಎಡಿಟ್ ಮಾಡಿದ್ದಾರೆ. ಅಂಬಾಭವಾನಿ ದೇವಿಯ ಮುಂದೆ ಶಿವಾಜಿ ಮಂಡಿಯೂರಿ ಪ್ರಾರ್ಥಿಸುತ್ತಿರುವ ಚಿತ್ರವನ್ನು ಕತ್ತರಿಸಿ, ಟಿಪ್ಪು ಸುಲ್ತಾನ್‌ನ ಮುಂದೆ ಮಂಡಿಯೂರಿ ಕುಳಿತು ಪ್ರಾರ್ಥಿಸುತ್ತಿರುವಂತೆ ಕೂರಿಸಿ ಕಿಡಿಗೇಡಿಗಳು ಎಡಿಟ್ ಮಾಡಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಯಾದಗಿರಿ ನಗರದ ಅರ್ಸನ್ ಶೇಕ್ ಹಾಗೂ ಶೇಕ್ ಇರ್ಫಾನ್ ಎಂಬ ಇಬ್ಬರು ಈ ಕೃತ್ಯ ಎಸಗಿದ್ದಾರೆ. ಮಾಹಿತಿ ತಿಳಿದ ಕೂಡಲೆ ನಗರ ಪೊಲೀಸ್ ಠಾಣೆಯಲ್ಲಿ ಜಮಾಯಿಸಿದ ನೂರಾರು ಹಿಂದೂ ಕಾರ್ಯಕರ್ತರು ಕೂಡಲೆ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು. ಎಡಿಟ್ ಮಾಡಿರುವ ಚಿತ್ರವನ್ನು ಯುವಕರು ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಹಾಕಿ ಅವಮಾನ ಮಾಡಿ ಅದರ ವೀಡಿಯೋ ಕೂಡ ಹರಿಬಿಟ್ಟಿದ್ದಾರೆ. ಈ ಮೂಲಕ ಹಿಂದೂ ಭಾವನೆಗೆ ಧಕ್ಕೆಯಾಗುವ ರೀತಿ ವರ್ತಿಸಿದ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ.

ಈ ಕುರಿತು ದೂರು ನೀಡಲು ಆಗಮಿಸಿದ ಹಿಂದೂ ಸಂಘಟನೆ ಯುವಕರು ತಡರಾತ್ರಿಯವರೆಗೂ ಯಾದಗಿರಿ ನಗರ ಠಾಣೆ ಮುಂದೆ ಜಮಾಯಿಸಿದರು. ಹಿಂದೂ ಕಾರ್ಯಕರ್ತ ಶಿವಕುಮಾರ್ ದೂರು ನೀಡಿದ್ದು, ಆರೋಪಿಗಳಾದ ಅರ್ಸನ್ ಶೇಕ್ ಹಾಗೂ ಶೇಕ್ ಇರ್ಫಾನ್ ವಿರುದ್ಧ ನಗರ ಠಾಣೆಯಲ್ಲಿ ಐಪಿಸಿ 295 (ಎ) ಪ್ರಕರಣ ದಾಖಲಾಗಿದೆ.