ಡೈಲಿ ವಾರ್ತೆ: 19/Mar/2024

ಸಿಎಎಗೆ ಸುಪ್ರೀಂ ತಡೆ ಇಲ್ಲ; ಕಾಯಿದೆ ಜಾರಿ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಪ್ರತಿಕ್ರಿಯಿಸಲು ಕೇಂದ್ರಕ್ಕೆ ಮೂರು ವಾರಗಳ ಕಾಲಾವಕಾಶ!


2019ರಲ್ಲಿ ಪೌರತ್ವ ತಿದ್ದುಪಡಿ ಮಸೂದೆಯು ಸಂಸತ್‌ನಲ್ಲಿ ಮಂಡನೆಯಾದಾಗ ಅದರ ವಿರುದ್ಧ ಕೋರ್ಟ್‌ನಲ್ಲಿ ಅನೇಕ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ ನಿಯಮಾವಳಿಗಳ ನೋಟಿಫೈ ಆಗದ ಕಾರಣ ಅದರ ಜಾರಿ ತಡೆಗೆ ಕೋರ್ಟ್ ಒಪ್ಪಿರಲಿಲ್ಲ. ಇದೇ ವಿಚಾರದ ಬಗ್ಗೆ ಕಳೆದ ವಾರ ವಾದ ಮಂಡಿಸಿದ ಕಪಿಲ್ ಸಿಬಲ್, ನಿಯಮಾವಳಿಗಳನ್ನು ಪ್ರಕಟಿಸಿರುವುದರಿಂದ ಆ ಪರಿಸ್ಥಿತಿ ಈಗಲೂ ಅನ್ವಯವಾಗುವುದಿಲ್ಲ ಎಂದು ಹೇಳಿದ್ದರು.

ಚುನಾವಣೆಗೂ ಮುನ್ನ ನಿಯಮಗಳ ಅಧಿಸೂಚನೆ ಪ್ರಕಟಿಸಿರುವುದರ ಹಿಂದೆ ರಾಜಕೀಯ ಉದ್ದೇಶವಿದೆ ಎಂಬ ಆರೋಪಗಳನ್ನು ತುಷಾರ್ ಮೆಹ್ತಾ ಅಲ್ಲಗಳೆದಿದ್ದಾರೆ.

“ಸಿಎಎ ಯಾವುದೇ ವ್ಯಕ್ತಿಯ ಪೌರತ್ವ ಕಿತ್ತುಕೊಳ್ಳುವುದಿಲ್ಲ” ಎಂದು ತುಷಾರ್ ಮೆಹ್ತಾ ಮಂಗಳವಾರ ಸ್ಪಷ್ಟಪಡಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆ, 2019ರ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಇತ್ಯರ್ಥಪಡಿಸುವವರೆಗೂ ನಿಯಮಗಳ ಜಾರಿಗೆ ತಡೆ ನೀಡುವಂತೆ ಕೋರಿ ಸಲ್ಲಿಕೆಯಾಗಿರುವ ಮನವಿಗಳಿಗೆ ಪ್ರತಿಕ್ರಿಯೆ ನೀಡಲು ಕೆಲವು ಸಮಯ ಬೇಕು ಎಂದು ಸಾಲಿಸಿಟರ್ ಜನರಲ್ ಕೋರಿದರು.

ಇದಕ್ಕೆ ಒಪ್ಪಿದ ಸಿಜೆಐ ಡಿವೈ ಚಂದ್ರಚೂಡ್, ಮೂರು ವಾರಗಳ ಸಮಯ ನೀಡಿ ಮುಂದಿನ ವಿಚಾರಣೆಯನ್ನು ಏಪ್ರಿಲ್ 9ಕ್ಕೆ ನಿಗದಿಪಡಿಸಿದರು.