ಡೈಲಿ ವಾರ್ತೆ: 18/ಜೂ./2024

ಉಡುಪಿಯಲ್ಲಿ ಮತ್ತೊಂದು ಗ್ಯಾಂಗ್ ವಾರ್: ಪುಂಡರ ಅಟ್ಟಹಾಸಕ್ಕೆ ಭಯಭೀತರಾದ ಜನ – ಮೂವರು ಆರೋಪಿಗಳ ಬಂಧನ!

ಉಡುಪಿ: ನಗರದ ಕುಂಜಿಬೆಟ್ಟುವಿನಲ್ಲಿ ನಡೆದ ಗ್ಯಾಂಗ್ ವಾರ್ ಜನರು ಮರೆಯುವ ಮುನ್ನವೇ ಮತ್ತೊಂದು ಗ್ಯಾಂಗ್ ವಾರ್ ನಡೆದಿದೆ. ಉಡುಪಿಯ ಪುತ್ತೂರಿನ ಬಿರಿಯಾನಿ ಪಾಯಿಂಟ್ ಬಿಳಿ ಜೂನ್ 15 ರಂದು ಗ್ಯಾಂಗ್ ವಾರ್ ನಡೆದಿದ್ದು ಇದು ಸಹ ತಡವಾಗಿ ಬೆಳಕಿಗೆ ಬಂದಿದೆ.

ಈ ಮೂಲಕ ಜಿಲ್ಲೆಯಲ್ಲಿ ಒಂದೇ ತಿಂಗಳು ಅಂತರದಲ್ಲಿ ಮೂರು ಗ್ಯಾಂಗ್‌ ವಾರ್ ಪ್ರಕರಣ ವರದಿಯಂತಾಗಿದೆ.

ಪುತ್ತೂರಿನ ಸೆಲೂನ್ ನೌಕರ ಚರಣ್, ಶಬರಿ ಎಂಬಾತನಿಗೆ ಬೈದಿದ್ದನು. ಈ ವಿಚಾರ ತಿಳಿದ ಪ್ರವೀಣ್‌ ಮತ್ತು ಈತನ ಗ್ಯಾಂಗ್ ಮಾತುಕತೆಗೆಂದು ಚರಣ್‌ನನ್ನು ಉಡುಪಿ ನಗರದ ಪುತ್ತೂರಿನ ಬಿರಿಯಾನಿ ಪಾಯಿಂಟ್ ಬಳಿ ಕರೆದಿದ್ದರು. ಚರಣ್ ತನ್ನ ಮೂವರು ಸ್ನೇಹಿತರ ಜೊತೆಗೂಡಿ ಆಗಮಿಸಿದ್ದನು. ಪ್ರವೀಣ್ ಆ್ಯಂಡ್ ಟೀಂ ತಲವಾರು ಬೀಸಿದೆ. ದಾಳಿಯಿಂದ ತಪ್ಪಿಸಿಕೊಳ್ಳಲು ಚರಣ್ ಮತ್ತು ಸಂಗಡಿಗರು ಬೈಕ್, ಸ್ಕೂಟರ್ ಬಿಟ್ಟು ಓಡಿದ್ದಾರೆ. ಚರಣ್ ಸಿಗದಿದ್ದಕ್ಕೆ ಪ್ರವೀಣ್ ಮತ್ತು ಆತನ ಟೀಂ ಆತನ ಬೈಕ್ ಮೇಲೆ ತಲವಾರಿನಿಂದ ಹಾನಿ ಮಾಡಿದ್ದಾರೆ. ಪುಂಡರು ತಾವು ಕೃತ್ಯವೆಸಗಿರುವ ದೃಶ್ಯವನ್ನು ವೀಡಿಯೋ ಮಾಡಿ ಅಟ್ಟಹಾಸಸ ಮೆರೆದಿದ್ದಾರೆ.

ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಅಭಿ, ಪ್ರವೀಣ್ ಕಟಪಾಡಿ ಮತ್ತು ದೇಶರಾಜ್ ಎಂಬ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.