ಡೈಲಿ ವಾರ್ತೆ: 07/ಜುಲೈ /2024

ಆಗುಂಬೆ: ಕಾಣೆಯಾಗಿದ್ದ ಯುವತಿ ಶವವಾಗಿ ಪತ್ತೆ – ಕೊಲೆ ಆರೋಪಿ ಬಂಧನ

ಆಗುಂಬೆ: ನಾಪತ್ತೆಯಾಗಿದ್ದ ಯುವತಿಯೋರ್ವಳು ಶವವಾಗಿ ಪತ್ತೆಯಾದ ಘಟನೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ನಾಲೂರುನಲ್ಲಿ ನಡೆದಿದೆ.

ಕೊಲೆಯಾದ ಯುವತಿ ಕುಶಾಲ್ ಅವರ ಮಗಳಾದ ಪೂಜಾ ಎ.ಕೆ. (24) ಎಂದು ಗುರುತಿಸಲಾಗಿದೆ.
ಕೊಲೆ ಆರೋಪಿ ಮಣಿಯನ್ನು ಬಂಧಿಸಲಾಗಿದೆ.

ಪೂಜಾ ಜೂ. 29 ರಂದು ನಾಪತ್ತೆಯಾಗಿದ್ದು, ನಾಲೂರು ಸಮೀಪದ ಅರಣ್ಯ ಪ್ರದೇಶದಲ್ಲಿ ಶವ ಪತ್ತೆಯಾಗಿದೆ. ಈ ಪ್ರಕರಣದ ತನಿಖೆ ಆಗುಂಬೆ ಪೊಲೀಸ್ ಠಾಣೆ ಪಿಎಸ್ ಐ ರಂಗನಾಥ್ ಅಂತರಗಟ್ಟಿ ನೇತೃತ್ವದಲ್ಲಿ ನಡೆದಿದ್ದು, ನಾಲೂರು ಸಮೀಪದ ಮಣಿ ಎಂಬ ವ್ಯಕ್ತಿ ಕತ್ತು ಹಿಸುಕಿ ಕೊಲೆ ಮಾಡಿ ನಾಲೂರು ಸಮೀಪ ಹೊಂಡದಲ್ಲಿ ಹಾಕಿರುವುದಾಗಿ ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ. ಶನಿವಾರ ರಾತ್ರಿ 11 ರ ವೇಳೆ ಆರೋಪಿ ಮಣಿಯನ್ನು ಘಟನೆ ನಡೆದ ಸ್ಥಳಕ್ಕೆ ಕರೆದು ಸ್ಥಳ ಮಹಜರು ಮಾಡಲಾಗಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತದೆ.