ಡೈಲಿ ವಾರ್ತೆ: 22/ಆಗಸ್ಟ್/2024

ಸೈಕಲ್ ಮೇಲೆ ಬರುತ್ತಿದ್ದ ಬಾಲಕರಿಬ್ಬರಿಗೆ ವಿದ್ಯುತ್ ಶಾಕ್: ಓರ್ವ ಸಾವು, ಮತ್ತೋರ್ವ ಗಂಭೀರ.! (ವಿಡಿಯೋ ವೀಕ್ಷಿಸಿ)

ಆಂಧ್ರಪ್ರದೇಶ: ಸೈಕಲ್‌ ನಲ್ಲಿ ಶಾಲೆಗೆ ತೆರಳುತ್ತಿದ್ದ ಇಬ್ಬರು ಪುಟ್ಟ ವಿದ್ಯಾರ್ಥಿಗಳಿಗೆ ವಿದ್ಯುತ್‌ ತಂತಿ ಸ್ಪರ್ಶಿಸಿ ಓರ್ವ ಬಾಲಕ ಸ್ಥಳದಲ್ಲೇ ಮೃತಪಟ್ಟು ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಆ. 21 ರಂದು ಬುಧವಾರ ಅಂದ್ರಪ್ರದೇಶದ ಕಡಪದ ಇಂಟರ್ನ್ಯಾಷನಲ್ ವೆಲ್ಫೇರ್ ಮಂಟಪಂ ಬಳಿ ಸಂಭವಿಸಿದೆ.

ಈ ಘೋರ ದುರಂತವು ಅಂಗಡಿ ಬೀದಿಯಲ್ಲಿರುವ ಜನರ ಕಣ್ಣ ಮುಂದೆಯೇ ನಡೆದಿದೆ. ಅಲ್ಲದೆ ಈ ಘಟನೆ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ವಿದ್ಯಾರ್ಥಿಗಳಿಬ್ಬರು ವಿದ್ಯಾಸಾಗರ್ ಶಾಲೆಯಲ್ಲಿ 10 ಮತ್ತು 8ನೇ ತರಗತಿಯಲ್ಲಿ ಓದುತ್ತಿದ್ದು, ಬೆಳಗ್ಗೆ ಒಂದೇ ಸೈಕಲ್‍ನಲ್ಲಿ ಶಾಲೆಗೆ ಇಬ್ಬರು ಬರುತ್ತಿರುವಾಗ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದ್ದು, ತಕ್ಷಣವೇ ಸೈಕಲ್‍ನಿಂದ ಕೆಳಗೆ ಬಿದ್ದಿದ್ದಾರೆ. ಕೆಲವು ಕ್ಷಣಗಳ ನಂತರ, ಒಬ್ಬ ವಿದ್ಯಾರ್ಥಿಯ ದೇಹಕ್ಕೆ ಮತ್ತು ಸೈಕಲ್ ಗೆ ಬೆಂಕಿ ಹೊತ್ತಿಕೊಂಡಿತು ಮತ್ತು ಇನ್ನೊಬ್ಬ ಹುಡುಗ ಅವನ ಪಕ್ಕದಲ್ಲಿ ಚಲನೆಯಿಲ್ಲದೆ ಬಿದ್ದಿದ್ದಾನೆ.
ಸುಟ್ಟಗಾಯಗಳಿಂದ ಸ್ಥಳದಲ್ಲೇ ಸಾವನ್ನಪ್ಪಿದ ವಿದ್ಯಾರ್ಥಿ ತನ್ವೀರ್ ಎಂದು ಗುರುತಿಸಲಾಗಿದೆ.
ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಅವನನ್ನು ಸ್ಥಳೀಯರು ತಕ್ಷಣ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.