ಡೈಲಿ ವಾರ್ತೆ: 08/Sep/2024

ಅಂಗಡಿಗೆ ಹೋದ ಮಹಿಳೆಯನ್ನು ಅಪಹರಿಸಲು ಯತ್ನ: ಆರೋಪಿಯನ್ನು ನಗ್ನಗೊಳಿಸಿ ಥಳಿಸಿದ ಯುವಕರ ತಂಡ

ಬೆಂಗಳೂರು: ಅಂಗಡಿಗೆ ಹಾಲು ತರಲು ಬಂದಿದ್ದ ಮಹಿಳೆಯನ್ನು ಬಾಯಿ ಮುಚ್ಚಿ ಎಳೆದೊಯ್ಯಲು ಯತ್ನಿಸಿದ ವ್ಯಕ್ತಿಯೋರ್ವನನ್ನು ಯುವಕರ ತಂಡವೊಂದು ಬೆತ್ತಲೆಗೊಳಿಸಿ ಥಳಿಸಿದ ಘಟನೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಕಲ್ಕೆರೆ ಕಾಲೋನಿ ಬಳಿ ನಡೆದಿದೆ.

ಆರೋಪಿ ಧಾರವಾಡ ಮೂಲದ ರವಿಕುಮಾರ್ ಕಲ್ಕೆರೆ
ಎಂದು ಗುರುತಿಸಲಾಗಿದೆ.
ರವಿಕುಮಾರ್‌ ಕಲ್ಕೆರೆ ಹೋಟೆಲ್‌ನಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ. ಕಳೆದ ರಾತ್ರಿ ಅಪರಿಚಿತ ಮಹಿಳೆಯೊಬ್ಬರು ಅಂಗಡಿಗೆ ಹಾಲು ತೆಗೆದುಕೊಂಡು ಬರಲು ಹೋಗಿದ್ದರು. ನಶೆ ಏರಿಸಿಕೊಂಡಿದ್ದ ರವಿಕುಮಾರ್‌, ಮಹಿಳೆಯ ಹಿಂದಿನಿಂದ ಬಂದು ಬಾಯಿ ಮುಚ್ಚಿಕೊಂಡು ಎಳೆದೊಯ್ಯಲು ಯತ್ನಿಸಿದ್ದಾನೆ. ಇದರಿಂದ ಆತಂಕಗೊಂಡ ಮಹಿಳೆ ಸಹಾಯಕ್ಕಾಗಿ ಕಿರುಚಿಕೊಂಡಿದ್ದಾಳೆ.
ಅಲ್ಲಿಯೇ ಇದ್ದ ಗ್ರಾಮದ ಯುವಕರು ಮಹಿಳೆ ನೆರವಿಗೆ ಧಾವಿಸಿದ್ದಾರೆ. ಬಳಿಕ ಯುವಕರ ಕಂಡು ಎಸ್ಕೇಪ್ ಆಗಲು ಯತ್ನಿಸಿದ ರವಿಕುಮಾರ್‌ನನ್ನು ಹಿಡಿದು ಮನಸೋ ಇಚ್ಛೆ ಥಳಿಸಿದ್ದಾರೆ. ರವಿಕುಮಾರ್‌ನನ್ನು ನಗ್ನಗೊಳಿಸಿ ಹೊಡೆದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಆಗಮಿಸಿ ರವಿಕುಮಾರ್​ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡಿರುವ ರವಿಕುಮಾರ್​​ನನ್ನು ಪೊಲೀಸರು, ಗೊಟ್ಟಿಗೆರೆಯ ವಿಜಯಶ್ರೀ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.