ಡೈಲಿ ವಾರ್ತೆ: 29/Sep/2024

ಕುಂದಾಪುರ ವಿಶ್ವ ಹೃದಯ ದಿನಾಚರಣೆ ಪ್ರಯುಕ್ತ ಸೈಕಲ್ ಜಾಥ “ಯೋಧ-2024” ಕಾರ್ಯಕ್ರಮಕ್ಕೆ ಸಂಸದ ಕೋಟ ಅವರಿಂದ ಚಾಲನೆ

ಕುಂದಾಪುರ: ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕುಂದಾಪುರ, ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಕೋಟೇಶ್ವರ,, ಎಂ.ಜಿ.ಫ್ರೆಂಡ್ಸ್ ಕುಂಭಾಸಿ, ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳ ತೆಕ್ಕಟ್ಟೆ ಘಟಕ, ಸೈಕಲ್ ಅಸೋಸಿಯೇಶನ್ ಕುಂದಾಪುರ ಇವರ ಸಹಯೋಗದೊಂದಿಗೆ ವಿಶ್ವ ಹೃದಯ ದಿನಾಚರಣೆ ಪ್ರಯುಕ್ತ ಸೈಕಲ್ ಜಾಥ “ಯೋಧ-2024” ಕಾರ್ಯಕ್ರಮಕ್ಕೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಕುಂದಾಪುರದ ಜನ ಹೃದಯವಂತರು ವಿಶ್ವ ಹೃದಯ ದಿನಾಚರಣೆಯ ಅಂಗವಾಗಿ ಕುಂದಾಪುರದಲ್ಲಿ ಯೋಧ 2024 ಸೈಕಲ್ ಜಾಥನಡೆಸುತ್ತಿರುವುದು ಕುಂದಾಪುರದ ಜನರ ಹೃದಯವಂತಿಕೆಗೆ ಸಾಕ್ಷಿ ಎಂದರು. ಹೃದಯದ ರಕ್ಷಣೆ ಮತ್ತು ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಪ್ರತಿಯೊಬ್ಬರು ಮುಂಜಾಗ್ರತೆ ವಹಿಸಿ ಕೊಂಡಾಗ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ ಎಂದರು.

ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲ ಶುಭಕರ ಆಚಾರಿ ಜಾಥ ಜ್ಯೋತಿ ಬೆಳಗಿಸಿದರು. ಪುರಸಭೆಯ ಅಧ್ಯಕ್ಷ ಮೋಹನ್ ದಾಸ್ ಶೆಣೈ ಜಾಥಾಕ್ಕೆ ನಿಶಾನೆ ತೋರಿಸಿ ಚಾಲನೆ ನೀಡಿದರು. ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನ ಮಠ ಮೊದಲಾದವರು ಉಪಸ್ಥಿತರಿದ್ದರು.

ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.
ಮಕ್ಕಳು, ಮಹಿಳೆಯರು ಸೇರಿದಂತೆ ಸುಮಾರು 270 ಮಂದಿ ಸೈಕಲ್ ಜಾಥಾದಲ್ಲಿ ಪಾಲ್ಗೊಂಡರು. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಾಗಿದ ಜಾಥಾ ಕುಂಭಾಸಿಯ ಆನೆಗುಡ್ಡೆ ದೇವಸ್ಥಾನದಲ್ಲಿ ಸಮಾಪನಗೊಂಡಿತು.