ಧಾರವಾಡ: 24 ಗಂಟೆಯಾದ್ರೂ ಬೈಪಾಸ್ ರಸ್ತೆಯಲ್ಲಿ ಕಡಿಮೆಯಾಗದ ನೀರಿನ ಹರಿವು-ಹಾವೇರಿಯಲ್ಲಿ ಭೀಕರ ಮಳೆಗೆ ಕೊಚ್ಚಿ ಹೋದ ಆಟೋ

ಧಾರವಾಡ: ಧಾರವಾಡದಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದ ಹಲವು ಅವಾಂತರ ಸೃಷ್ಟಿಯಾಗಿದ್ದು, ಹುಬ್ಬಳ್ಳಿ ಧಾರವಾಡ ಬೈಪಾಸ್ ರಸ್ತೆಯಲ್ಲಿ 24 ಗಂಟೆಯಾದರೂ ನೀರಿನ ಪ್ರಮಾಣ ಕಡಿಮೆಯಾಗಲಿಲ್ಲ.

ರಸ್ತೆ ಮೇಲೆ ನೀರು ಹರಿದು ಬಂದ ಹಿನ್ನೆಲೆ ವಾಹನ ಸವಾರರು ಪರದಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 4 ಹುಬ್ಬಳ್ಳಿ-ಧಾರವಾಡ ಯರಿಕೊಪ್ಪ ಗ್ರಾಮದ ಬಳಿಯ ಮನಸೂರ ಹಳ್ಳಕ್ಕೆ ಮಳೆಯಿಂದಾಗಿ ದೊಡ್ಡ ಪ್ರಮಾಣದಲ್ಲಿ ನೀರು ಬಂದಿದೆ.

ರಸ್ತೆ ಮೇಲೆಯೇ ನೀರು ಹರಿಯುತ್ತಿರುವ ಹಿನ್ನೆಲೆ, ರಾತ್ರಿ ಎಲ್ಲಾ ಬೈಪಾಸ್ ರಸ್ತೆ ಸ್ಥಗಿತಗೊಂಡಿತ್ತು. ಬೆಳಿಗ್ಗೆ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಲಾರಿಗಳು ಮಾತ್ರ ದಾಟಲು ಅವಕಾಶ ನೀಡಲಾಗಿದೆ. ಮತ್ತೆ ಮಳೆಯಾದರೆ ರಸ್ತೆ ಕಡಿತ ಆಗುವ ಸಾಧ್ಯತೆ ಇದೆ. ನಗರದ ಬಹುತೇಕ ನೀರು ಬೈಪಾಸ್ ರಸ್ತೆಯಿಂದ ಮನಸೂರ ಹಳ್ಳಕ್ಕೆ ಬರುತ್ತಿರುವುದರಿಂದ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ.

ಹಾವೇರಿಯಲ್ಲಿ ಭೀಕರ ಮಳೆಗೆ ಕೊಚ್ಚಿ ಹೋದ ಆಟೋ: ಭೀಕರ ಮಳೆಗೆ ಆಟೋವೊಂದು ಕೊಚ್ಚಿ ಹೋಗಿರುವ ಘಟನೆ ಹಾವೇರಿ ನಗರದ ನಾಗೇಂದ್ರನಮಟ್ಟಿ ಬಳಿ ಇರುವ ರೈಲ್ವೆ ಬ್ರಿಡ್ಜ್ ಬಳಿ ನಡೆದಿದೆ.
ನೀರಿನಲ್ಲಿ ಕೊಚ್ಚಿ ಹೋಗಿರುವ ಆಟೋವನ್ನು ತೆಗೆಯದೆ ಇದ್ದಿದ್ದಕ್ಕೆ ಅಧಿಕಾರಿಗಳ ವಿರುದ್ಧ ಆಟೋ ಚಾಲಕ ಆಕ್ರೋಶ ಹೊರಹಾಕಿದ್ದಾನೆ.

ಧಾರಾಕಾರ ಮಳೆ ಸುರಿದಿದ್ದರಿಂದ ಆಟೋ ನೀರಿನಲ್ಲಿ ಕೊಚ್ಚಿ ಹೋಗಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದ. ಆದರೆ ರಾತ್ರಿಯೇ ನೀರಿನಲ್ಲಿ ಆಟೋ ಕೊಚ್ಚಿಕೊಂಡು ಹೋಗಿದ್ದರೂ ಸಂಜೆವರೆಗೂ ಆಟೋವನ್ನು ನೀರಿನಿಂದ ಹೊರತೆಗೆಯುವ ಕಾರ್ಯ ಮಾಡಿಲ್ಲ. ಹೀಗಾಗಿ ಆಟೋ ಚಾಲಕ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾನೆ.