ಡೈಲಿ ವಾರ್ತೆ: 11/OCT/2024

ಬಿಗ್​ಬಾಸ್​ನಲ್ಲಿ ತುರ್ತು ಪರಿಸ್ಥಿತಿ – ರಾತ್ರೋ ರಾತ್ರಿ ಬಿಗ್​ಬಾಸ್ ಮನೆಯೊಳಕ್ಕೆ ನುಗ್ಗಿದ ಕ್ರೇನ್, ನರಕದ ಜಾಗ ಅಲ್ಲೋಲ ಕಲ್ಲೋಲ!

ಬಿಗ್​ಬಾಸ್ ಸೀಸನ್ 11 ರಲ್ಲಿ ಬಿಗ್​ಬಾಸ್​ನಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ.
ರಾತ್ರೋ ರಾತ್ರಿ ಬಿಗ್​ಬಾಸ್ ಮನೆಯೊಳಕ್ಕೆ ದೊಡ್ಡ ಕ್ರೇನ್ ನುಗ್ಗಿದ್ದು, ಐದಾರು ಮಂದಿ ದಾಂಡಿಗರು ಬಂದು ಮನೆಯ ಒಂದು ಭಾಗವನ್ನು ಅಲ್ಲೋಲ ಕಲ್ಲೋಲ ಮಾಡಿದ್ದಾರೆ. ಮಾತ್ರವೇ ಅಲ್ಲದೆ ಕ್ರೇನ್​ನ ಸಹಾಯದಿಂದ ಗೋಡೆಯೊಂದನ್ನು ಕಿತ್ತು ಎತ್ತಿಕೊಂಡು ಹೋಗಿದ್ದಾರೆ. ಇದನ್ನು ನೋಡಿ ಬಿಗ್​ಬಾಸ್ ಮನೆಯ ಸ್ಪರ್ಧಿಗಳು ಶಾಕ್ ಆಗಿದ್ದಾರೆ.

ಇದೀಗ ಬಿಡುಗಡೆ ಆಗಿರುವ ಪ್ರೋಮೋನಲ್ಲಿ ಬಿಗ್​ಬಾಸ್ ಮನೆಯಲ್ಲಿ ಅಚಾನಕ್ಕಾಗಿ ಜೋರಾಗಿ ಸೈರನ್ ಕೂಗಿಕೊಂಡಿದೆ ಇದರಿಂದ ಎಲ್ಲರೂ ಭಯಗೊಂಡಿದ್ದಾರೆ. ಕೂಡಲೇ ಮನೆಯ ಒರಗೆ ದೊಡ್ಡ ಕ್ರೇನ್ ಒಂದು ಬಂದಿದೆ. ಆ ಕ್ರೇನ್​ನಲ್ಲಿ ಕೆಲವು ದಾಂಡಿಗರು ಕೈಯಲ್ಲಿ ಕೆಲ ಆಯುಧಗಳನ್ನು ಹಿಡಿದುಕೊಂಡು ಬಂದಿದ್ದಾರೆ. ಬಂದ ಒಡನೆ ನರಕದ ಜಾಗವನ್ನು ಅಲ್ಲೋಲ ಕಲ್ಲೋಲ ಮಾಡಿದ್ದಾರೆ. ಅಲ್ಲಿದ್ದ ಮಡಕೆ ಒಡೆದಿದ್ದಾರೆ, ಕುರ್ಚಿ ಮುರಿದಿದ್ದಾರೆ. ಜೈಲಿನ ಕಬ್ಬಿಣದ ಗೋಡೆಗಳನ್ನು ಒಡೆದು ಬೀಳಿಸಿದ್ದಾರೆ. ಕೆಲವನ್ನು ಯಂತ್ರಗಳನ್ನು ಬಳಸಿ ಕತ್ತರಿಸಿದ್ದಾರೆ. ಅಂತಿಮವಾಗಿ ದೊಡ್ಡ ಕ್ರೇನ್​ನ ಸಹಾಯದಿಂದ ಬಿಗ್​ಬಾಸ್ ಮನೆಯ ನರಕದ ಕಬ್ಬಿಣದ ಗೇಟ್ ಅನ್ನು ಕಿತ್ತು ಬಿಸಾಡಿ, ಎತ್ತಿಕೊಂಡು ಹೋಗಿದ್ದಾರೆ.

ಅಲ್ಲಿಗೆ ಬಿಗ್​ಬಾಸ್​ನಲ್ಲಿ ನರಕದ ಕಾನ್ಸೆಪ್ಟ್ ಮುಗಿದಂತೆ ಕಾಣುತ್ತಿದೆ. ಆದರೆ ಹೀಗೆ ಹಠಾತ್ತನೆ ನರಕದ ಸೆಟಪ್ ಅನ್ನು ಕಿತ್ತು ಬಿಸಾಡಿದ್ದಕ್ಕೆ ಕಾರಣವೇನು ಎಂಬುದು ಅನುಮಾನಕ್ಕೆ ಕಾರಣವಾಗಿದೆ. ಕೆಲವು ದಿನಗಳ ಹಿಂದಷ್ಟೆ ಈ ಬಾರಿಯ ಬಿಗ್​ಬಾಸ್​ನ ಸ್ವರ್ಗ-ನರಕ ಕಾನ್ಸೆಪ್ಟ್​ ಬಗ್ಗೆ ಮಹಿಳಾ ಆಯೋಗ, ಮಾನವ ಹಕ್ಕು ಆಯೋಗ ಅಸಮಾಧಾನ ವ್ಯಕ್ತಪಡಿಸಿತ್ತು.

ನರಕದಲ್ಲಿರುವವರಿಗೆ ಸರಿಯಾಗಿ ಊಟ ಕೊಡುತ್ತಿರಲಿಲ್ಲ, ಬದಲಿಗೆ ಗಂಜಿ ಕೊಡಲಾಗುತ್ತಿತ್ತು, ಶೌಚ ಬಳಸಲು ಅವಕಾಶ ಇರಲಿಲ್ಲ. ಇದೆಲ್ಲವೂ ಮಾನವ ಹಕ್ಕು ಉಲ್ಲಂಘನೆ, ಮಾನವನಿಗೆ ಕನಿಷ್ಟ ಸಿಗಬೇಕಾದ ಸೌಲಭ್ಯವನ್ನು ನೀಡುತ್ತಿಲ್ಲವೆಂದು ಆರೋಪಿಸಿ ಮಾನವ ಹಕ್ಕು ಆಯೋಗಕ್ಕೆ ಮಹಿಳಾ ಆಯೋಗದ ನಾಗಲಕ್ಷ್ಮಿ ಪತ್ರ ಬರೆದಿದ್ದರು. ಇದರಿಂದಾಗಿ ಮಾನವ ಹಕ್ಕು ಆಯೋಗ ದೂರು ದಾಖಲು ಮಾಡಿಕೊಂಡು ಬಿಗ್​ಬಾಸ್​ಗೆ ನೊಟೀಸ್ ಕಳಿಸಿತ್ತು, ಅದೇ ಕಾರಣಕ್ಕೆ ಹಠಾತ್ತನೆ ಈ ಬದಲಾವಣೆ ಕಂಡು ಬಂದಿದೆ.

ನರಕದಲ್ಲಿ ಇರುವವರು ಊಟಕ್ಕೆ ಬಹಳ ಕಷ್ಟ ಪಡುತ್ತಿದ್ದರು. ಅವರಿಗೆ ಗಂಜಿ ನೀಡಲಾಗುತ್ತಿತ್ತು, ಒಂದು ಉಪ್ಪಿನಕಾಯಿಗೂ ಬೇಡಿಕೊಳ್ಳಬೇಕಾದ ಸ್ಥಿತಿ ಇತ್ತು. ನೀರು ಸಹ ಬೇಡಿಕೊಳ್ಳಬೇಕಾಗಿತ್ತು. ಶೌಚಾಲಯಕ್ಕೆ ಹೋಗಬೇಕಾದರೂ ಸ್ವರ್ಗವಾಸಿಗಳ ಅನುಮತಿ ಕೇಳಬೇಕಾಗಿತ್ತು. ಸ್ವರ್ಗವಾಸಿಗಳಲ್ಲಿ ಕೆಲವರು ನರಕವಾಸಿಗಳನ್ನು ಬಹುವಾಗಿ ಕಾಡಿಸಿದ್ದರು. ಇದರ ಆಧಾರದ ಮೇಲೆ ಮಹಿಳಾ ಆಯೋಗದ ನಾಗಲಕ್ಷ್ಮಿ ಮಾನವ ಆಯೋಗಕ್ಕೆ ಪತ್ರ ಬರೆದು, ಬಿಗ್​ಬಾಸ್ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ. ಯಾವುದೇ ವ್ಯಕ್ತಿಯ ಒಪ್ಪಿಗೆ ಇದ್ದು, ಒಪ್ಪಿಗೆ ಇಲ್ಲದೆಯೂ ಕೂಡಿ ಹಾಕುವುದು ತಪ್ಪಾಗುತ್ತದೆ. ಅಲ್ಲದೆ ಅಲ್ಲಿ ಕೂಡಿ ಹಾಕಲಾಗಿರುವ ವ್ಯಕ್ತಿಗಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿಲ್ಲ, ದೇಹಬಾಧೆ ತೀರಿಸಿಕೊಳ್ಳಲು ಅವಕಾಶ ನೀಡಲಾಗುತ್ತಿಲ್ಲ ಎಂದಿದ್ದರು. ಇಂಥಹಾ ಅಮಾನವೀಯ ವ್ಯವಸ್ಥೆ ಜೈಲುಗಳಲ್ಲಿ ಸಹ ಇಲ್ಲ ಎಂದು ನಾಗಲಕ್ಷ್ಮಿ ದೂರಿದ್ದರು. ಪತ್ರ ಆಧರಿಸಿ ಮಾನವ ಹಕ್ಕು ಆಯೋಗವು ದೂರು ದಾಖಲಿಸಿಕೊಂಡಿತ್ತು.