ಡೈಲಿ ವಾರ್ತೆ: 15/ಫೆ. /2025

ಮುತ್ತತ್ತಿ ದೇವಾಲಯಕ್ಕೆ ಬಂದಿದ್ದ ಇಬ್ಬರು ಕಾವೇರಿ ನದಿಯಲ್ಲಿ ನೀರುಪಾಲು

ಮಂಡ್ಯ: ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಮಹಿಳೆಯರು ಸಾವಿಗೀಡಾದ ಘಟನೆ ಮಳವಳ್ಳಿಯ ಪ್ರಸಿದ್ಧ ಕ್ಷೇತ್ರ ಮುತ್ತತ್ತಿಯಲ್ಲಿ ನಡೆದಿದೆ.

ಮೃತರನ್ನು ಕನಕಪುರ ತಾಲೂಕಿನ ಗಾಣಾಳು ಗ್ರಾಮದ ಶೋಭಾ (23) ಮತ್ತು ನದಿಯಾ (19) ಎಂದು ಗುರುತಿಸಲಾಗಿದೆ. 50ಕ್ಕೂ ಹೆಚ್ಚು ಮಂದಿ ಸಂಬಂಧಿಕರ ಜೊತೆ ಅವರು ದೇವರ ಕಾರ್ಯಕ್ಕೆ ಬಂದಿದ್ದರು. ಈ ವೇಳೆ ನದಿಗೆ ಸ್ನಾನ ಮಾಡಲು ಹೋಗಿದ್ದಾಗ ಕಾಲು ಜಾರಿ ಈ ದುರ್ಘಟನೆ ನಡೆದಿದೆ.

ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.