



ಡೈಲಿ ವಾರ್ತೆ: 20/ಮಾರ್ಚ್ /2025


ಪೊಲೀಸ್ ಠಾಣೆಯಲ್ಲೇ ಇಸ್ಪೀಟು ಆಡಿದ ಐವರು ಪೊಲೀಸರ ಅಮಾನತು
ಕಲಬುರಗಿ| ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ವಾಡಿ ಪೊಲೀಸ್ ಠಾಣೆಯೊಳಗೆ ಇಸ್ಪೀಟು ಆಡಿದ ಆರೋಪದ ಮೇಲೆ ಪೊಲೀಸ್ ಇಲಾಖೆ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದೆ.
ಅಮಾನತುಗೊಂಡ ಪೊಲೀಸ್ ಅಧಿಕಾರಿಗಳನ್ನು ಸಹಾಯಕ ಸಬ್-ಇನ್ಸ್ಪೆಕ್ಟರ್ ಮೊಹಮ್ಮದ್ ಮಿಯಾ, ಹೆಡ್ ಕಾನ್ಸ್ಟೆಬಲ್ಗಳಾದ ನಾಗರಾಜ್, ಸಾಯಿಬಣ್ಣ, ಇಮಾಮ್ ಮತ್ತು ಕಾನ್ಸ್ಟೆಬಲ್ ನಾಗಭೂಷಣ್ ಎಂದು ಗುರುತಿಸಲಾಗಿದೆ.
ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸುಲು ಅವರು ಐವರು ಪೊಲೀಸರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದು, ಘಟನೆಯ ಬಗ್ಗೆ ವಿವರಣೆ ಕೋರಿ ಎಸ್ಐ ತಿರುಮಲೇಶ್ ಅವರಿಗೆ ನೋಟಿಸ್ ನೀಡಿದ್ದಾರೆ.
ಅಮಾನತುಗೊಂಡ ಅಧಿಕಾರಿಗಳು ಕರ್ತವ್ಯದ ಸಮಯದಲ್ಲಿ ಪೊಲೀಸ್ ಠಾಣೆಯ ಮೊದಲ ಮಹಡಿಯಲ್ಲಿ ಇಸ್ಪೀಟು ಆಡಲು ಗುಂಪು ಗುಂಪಾಗಿ ಸೇರಿದ್ದರು ಎಂದು ಆರೋಪಿಸಲಾಗಿದೆ.
ಇಬ್ಬರು ಪೊಲೀಸ್ ಅಧಿಕಾರಿಗಳು ಸಮವಸ್ತ್ರದಲ್ಲಿ ಇಸ್ಪೀಟು ಆಡುತ್ತಿರುವ ಏಳು ಸೆಕೆಂಡುಗಳ ವಿಡಿಯೋ ವೈರಲ್ ಆಗಿತ್ತು ಮತ್ತು ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿತ್ತು.
ಈ ಘಟನೆಯು ಚಿತ್ತಾಪುರ ಕ್ಷೇತ್ರವನ್ನು ಪ್ರತಿನಿಧಿಸುವ ಮತ್ತು ಕಲಬುರಗಿಯ ಉಸ್ತುವಾರಿ ಸಚಿವರಾಗಿರುವ ಆರ್ಡಿಪಿಆರ್, ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಕ್ಷೇತ್ರದಲ್ಲಿ ನಡೆದಿದೆ.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಖರ್ಗೆ, “ಕಲಬುರಗಿ ಜಿಲ್ಲೆಯ ವಾಡಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ಜೂಜಾಟದಲ್ಲಿ ತೊಡಗಿರುವ ವಿಡಿಯೋ ವೈರಲ್ ಆದ ನಂತರ, ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಮತ್ತು ಠಾಣೆಯ ಸಬ್-ಇನ್ಸ್ಪೆಕ್ಟರ್ಗೆ ನೋಟಿಸ್ ನೀಡಲಾಗಿದೆ” ಎಂದು ಹೇಳಿದ್ದಾರೆ.