ಡೈಲಿ ವಾರ್ತೆ: 06/ಸೆ./2025

ಚಾಂತಾರು ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮ: ಜೀವನ ಒಂದು ಅಮೂಲ್ಯ ಕೊಡುಗೆ, ಅದನ್ನು ಮಾದಕ ವಸ್ತುಗಳಿಗೆ ವ್ಯರ್ಥ ಮಾಡಬೇಡಿ – ಎಸ್‌.ಐ ಅಶೋಕ್‌

ಬ್ರಹ್ಮಾವರ: ಯುವ ಜನಾಂಗ ಮಾದಕ ಪದಾರ್ಥಗಳಿಂದ ದೂರವಿದ್ದು, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪೂರಕವಾಗಬೇಕು ಎಂದು ಬ್ರಹ್ಮಾವರದ ಸಬ್‌ಇನ್ಸ್‌ಪೆಕ್ಟರ್‌ಅಶೋಕ್‌ಮಲಬಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.

ಚಾಂತಾರು ಬಸ್ಸು ನಿಲ್ದಾಣದ ವಠಾರದಲ್ಲಿ ಶನಿವಾರ ಉಡುಪಿ ಜಿಲ್ಲಾ ಪೊಲೀಸ್‌ಇಲಾಖೆ, ಬ್ರಹ್ಮಾವರ ಪೊಲೀಸ್‌ಠಾಣೆ, ಚಾಂತಾರು ಗ್ರಾಮ ಪಂಚಾಯಿತಿ, ಕ್ರಾಸ್‌ಲ್ಯಾಂಡ್‌ಕಾಲೇಜಿನ ಸಹಯೋಗದಲ್ಲಿ ನಡೆದ ಮಾದಕ ದ್ರವ್ಯ ವಿರೋಧಿ ಜಾಗೃತಿ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮವು ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಜನರಿಗೆ, ಮುಖ್ಯವಾಗಿ ಯುವ ಜನಾಂಗಕ್ಕೆ ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಲಾಗುತ್ತಿದೆ. ಮಾದಕ ವ್ಯಸನ ಮುಕ್ತ ಸಮಾಜವನ್ನು ನಿರ್ಮಿಸುವುದು ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ. ಮಾದಕ ವ್ಯಸನದಿಂದಾಗುವ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ತೊಂದರೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವುದು, ಯುವ ಜನಾಂಗ ಆರೋಗ್ಯಕರ ಮತ್ತು ಜವಾಬ್ದಾರಿಯುತ ಜೀವನವನ್ನು ನಡೆಸಲು ಪ್ರೋತ್ಸಾಹಿಸುವುದು, ಪೊಲೀಸರು ಮತ್ತು ಇತರ ಅಧಿಕಾರಿಗಳೊಂದಿಗೆ ಸಹಕರಿಸಿ, ಮಾದಕ ದ್ರವ್ಯ ಮಾರಾಟ ಮಾಡುವವರ ಬಗ್ಗೆ ಮಾಹಿತಿ ನೀಡಲು ಜನರನ್ನು ಪ್ರೋತ್ಸಾಹಿಸಿದಲ್ಲಿ ಮಾದಕ ದ್ರವ್ಯ ಮುಕ್ತ ಸಮಾಜವನ್ನು ನಿರ್ಮಿಸಬಹುದು ಎಂದು ಅವರು ಹೇಳಿದರು.

ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ ವಿಠಲ್‌ ಎಂ ಮಾದಕ ಪದಾರ್ಥಿಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳನ್ನು ವಿವರಿಸಿ, ಜಾಗೃತಿಯ ಅಗತ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿ, ಯುವ ಪೀಳಿಗೆ ಜಾಗೃತಗೊಂಡಾಗ ಮಾತ್ರ ಮಾದಕ ವಸ್ತುಗಳ ಮಾರಾಟಕ್ಕೆ ಕಡಿವಾಣ ಹಾಕಲು ಸಾಧ್ಯ. ಅದಕ್ಕೆ ಯುವ ಜನತೆ ಪೊಲೀಸ್‌ ಇಲಾಖೆಯೊಂದಿಗೆ ಕೈ ಜೋಡಿಸಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ರಾಬರ್ಟ್‌ಕ್ಲೈವ್‌ಅಧ್ಯಕ್ಷತೆ ವಹಿಸಿದ್ದರು.

ಗಮನ ಸೆಳೆದ ಬೀದಿ ನಾಟಕ/ ಮೈಮ್‌ಶೋ: ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ರೆಡ್‌ಕ್ರಾಸ್‌ಘಟಕ, ಕಲಾ ಮತ್ತು ಸಾಹಿತ್ಯ ವೇದಿಕೆ ಮತ್ತು ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಮಾದಕ ವ್ಯಸನದಿಂದ ಯುವ ಜನತೆ ಹೇಗೆ ದಾರಿ ತಪ್ಪುತ್ತಾರೆ, ಅದರಿಂದ ಹೇಗೆ ಮುಕ್ತರಾಗಬಹುದು ಎನ್ನುವ ಬಗ್ಗೆ ವಿದ್ಯಾರ್ಥಿಗಳಿಂದ ಮೂಡಿಬಂದ ಬೀದಿ ನಾಟಕ/ಮೈಮ್‌ಶೋ ಸಾರ್ವಜನಿಕರ ಗಮನ ಸೆಳೆಯಿತು.

ಚಾಂತಾರು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಸತೀಶ ನಾಯ್ಕ, ಪೊಲೀಸ್‌ ಇಲಾಖೆಯ ಕಾನ್ಸ್ಟೇಬಲ್ ಸುರೇಶ್‌, ಕಾಲೇಜಿನ ಉಪಪ್ರಾಂಶುಪಾಲ ಹಾಗೂ ಮಾದಕ ದ್ರವ್ಯ ವಿರೋಧಿ ಜಾಗೃತಿ ಸಮಿತಿಯ ಸಂಚಾಲಕ ಬಿಜು ಜೇಕಬ್‌, ಎನ್‌.ಎಸ್‌.ಎಸ್‌ ಘಟಕದ ಯೋಜನಾಧಿಕಾರಿಗಳಾದ ಸುಕುಮಾರ್‌ಶೆಟ್ಟಿಗಾರ್‌, ಅಶ್ವಿನಿ, ಕಲಾ ಮತ್ತು ಸಾಹಿತ್ಯ ವೇದಿಕೆಯ ಸಂಚಾಲಕಿ ಸುಮಿತ್ರ ಮತ್ತು ರೂಪ, ವಿದ್ಯಾರ್ಥಿ ಸಂಘದ ಸಂಚಾಲಕಿ ದೀಪಾ ಕಿತ್ತೂರು, ರೆಡ್‌ಕ್ರಾಸ್‌ನ ನವೀನ ಕುಮಾರ್‌ಶೆಟ್ಟಿ ಇದ್ದರು.

ವಿದ್ಯಾರ್ಥಿಗಳಾದ ಬರ್ನಿಸ್‌ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಸತ್ಯವತಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.