ಡೈಲಿ ವಾರ್ತೆ: 23/DEC/2025

ಬ್ರಹ್ಮಾವರ| ಶ್ರೀಭ್ರಾಮರೀ ನಾಟ್ಯಾಲಯದ ರಜತ ವರ್ಷದ ಅಂಗವಾಗಿ ನೃತ್ಯ ಪರಂಪರಾ ಭರತನಾಟ್ಯ ಪ್ರಾತ್ಯಕ್ಷಿಕೆಯ ಉದ್ಘಾಟನ ಕಾರ್ಯಕ್ರಮ

ಬ್ರಹ್ಮಾವರ: ಕೆ.ಪಿ.ಎಸ್. ಪ್ರೌಢಶಾಲೆ ಬ್ರಹ್ಮಾವರದಲ್ಲಿ ಅಮ್ಮುಂಜೆ ಶ್ರೀ ಭ್ರಾಮರೀ ನಾಟ್ಯಾಲಯದ ರಜತ ವರ್ಷದ ಗೆಜ್ಜೆ ಯೊಂದಿಗೆ ಬೆಳ್ಳಿ ಹೆಜ್ಜೆ ಅಂಗವಾಗಿ “ನೃತ್ಯ ಪರಂಪರಾ” ಸಂಸ್ಕೃತಿ -ಆರೋಗ್ಯ- ಶಿಕ್ಷಣ ಎಂಬ ವಿಷಯದಲ್ಲಿ ಭರತನಾಟ್ಯ ಪ್ರಾತ್ಯಕ್ಷಿಕೆ ನಡೆಯಿತು.

ಕನ್ನಡ ಮತ್ತು ಸಂಸ್ಕೃತಿ ಉಡುಪಿ ಇಲಾಖೆಯ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮವನ್ನು ದೈಹಿಕ ಶಿಕ್ಷಣ ಶಿಕ್ಷರಾದ ಜಗದೀಶ್ ರವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು. ನೃತ್ಯ ಪರಂಪರೆ ಬಗ್ಗೆ ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಎಷ್ಟು ಮುಖ್ಯವೋ ಅದೇ ರೀತಿ ಈ ಕಲೆ ಸಂಸ್ಕೃತಿಯ ಕಲಿಕೆ ಕೂಡ ಅತ್ಯವಶ್ಯ. ಪುರಾಣ ಕಥೆಗಳ ಅರಿವಿನ ಭರತನಾಟ್ಯದಿಂದ ಧರ್ಮ ಸಂಸ್ಕೃತಿ ಉಳಿವು ಸಾಧ್ಯ ಎಂಬ ಸಂದೇಶ ನೀಡಿದರು.

ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಧಾಕೃಷ್ಣ ನೃತ್ಯ ನಿಕೇತನ ಉಡುಪಿ ಇದರ ನಿರ್ದೇಶಕರು ಹಾಗೂ ವಿದ್ವಾನ್ ಭವಾನಿಶಂಕರ್ ಅವರ ಗುರುಗಳಾದ ವಿದುಷಿ ವೀಣಾ ಎಂ ಸಾಮಗ, ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ ಹಾವಂಜೆ, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಉಪಾಧ್ಯಕ್ಷರಾದ ಅರುಣ್ ಭಂಡಾರಿ,
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ರಾಮಕೃಷ್ಣ ಗಾಣಿಗ ಹಾರಾಡಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ನಾಟ್ಯಾಲಯದ ಸಂಸ್ಥಾಪಕರಾದ ನೃತ್ಯಗುರು ವಿದ್ವಾನ್ ಕೆ ಭವಾನಿಶಂಕರ್ ರವರು ಕಾರ್ಯಕ್ರಮದ ಉದ್ದೇಶವನ್ನು ತಿಳಿಸುವುದರೊಂದಿಗೆ ಗೆಜ್ಜೆಯೊಂದಿಗೆ ಬೆಳ್ಳಿ ಹೆಜ್ಜೆ ಎಂಬ ಶೀರ್ಷಿಕೆಯೊಂದಿಗೆ 25 ಶೈಕ್ಷಣಿಕ ಸಂಸ್ಥೆಗಳಲ್ಲಿ ನೃತ್ಯ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸುವ ಯೋಚನೆಗಳೊಂದಿಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು.
ನಾಟ್ಯಾಲಯದ ಹಿರಿಯ ಕಲಾವಿದರಾದ ವಿದುಷಿ ಶೇಫಾಲಿ, ವಿದುಷಿ ಸಂಜನಾ ಜೆ.ಸುವರ್ಣ, ವಿದುಷಿ ಕಾತ್ಯಾಯಿನಿ, ಸಾತ್ವಿಕ್ ಕೆ, ದಿಶಾನ್ ಹಾಗೂ ತನ್ವಿ ಇವರಿಂದ ಭರತನಾಟ್ಯ ಪ್ರಾತ್ಯಕ್ಷಿಕೆ ಪ್ರಸ್ತುತಗೊಂಡಿತು. ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
ಯೊಗೀಶ್ ಕೊಳಲಗಿರಿ ನಿರೂಪಿಸಿದರು.