ಡೈಲಿ ವಾರ್ತೆ:ಜನವರಿ/28/2026

ಮುನಿಯಾಲು ಸಂಜೀವಿನಿ ಫಾರ್ಮ್ ಗೋಧಾಮದಲ್ಲಿ ಏಕಪವಿತ್ರ ಶ್ರೀಮನ್ನಾಗಮಂಡಲಕ್ಕೆ ಸಜ್ಜು: ಪ್ರಕೃತಿಯ ಆರಾಧನೆಯೊಂದಿಗೆ ಅಪರೂಪದ ಪವಿತ್ರ ಕಾರ್ಯಕ್ರಮ – ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ

ಹೆಬ್ರಿ: ಮುನಿಯಾಲಿನ ಸಂಜೀವಿನಿ ಫಾರ್ಮ್ ಗೋಧಾಮವನ್ನು ಕಂಡು ಅಪಾರ ಸಂತೋಷವಾಗಿದೆ. ಪ್ರಕೃತಿಯ ಆರಾಧನೆಯೊಂದಿಗೆ ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು ಎಂಬುದಕ್ಕೆ ಗೋಧಾಮವೇ ಜೀವಂತ ಉದಾಹರಣೆ ಎಂದು ಕಟಪಾಡಿ ಆನೆಗುಂದಿ ಮಹಾಸಂಸ್ಥಾನದ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಹೇಳಿದರು.
ಅವರು ಮಂಗಳವಾರ ಹೆಬ್ರಿ ತಾಲ್ಲೂಕಿನ ಮುನಿಯಾಲು ಸಂಜೀವಿನಿ ಫಾರ್ಮ್ ಗೋಧಾಮದ ನಾಗಬನದಲ್ಲಿ ಫೆಬ್ರವರಿ 19ರಿಂದ 21ರವರೆಗೆ ನಡೆಯಲಿರುವ ಏಕಪವಿತ್ರ ಶ್ರೀಮನ್ನಾಗಮಂಡಲ ಕಾರ್ಯಕ್ರಮದ ಅಂಗವಾಗಿ ನಡೆದ ಸಮಾಲೋಚನಾ ಸಭೆಯಲ್ಲಿ ಆಶೀರ್ವಚನ ನೀಡಿದರು.

ರೈತರ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಬಹುಮುಖ ಯೋಜನೆ ಯೊಜನೆಯ ರಾಮಕೃಷ್ಣ ಆಚಾರ್ಯರು ಸರ್ಕಾರ ಮಾಡದಿರುವ ಮಹಾನ್ ಕಾರ್ಯವನ್ನು ಮಾಡುತ್ತಿದ್ದು, ಕೃಷಿಪೀಠ ಪ್ರಶಸ್ತಿಯನ್ನು ನೀಡಲು ಮುಂದಾಗಿರುವುದು ಶ್ಲಾಘನೀಯ. ಪ್ರತಿಯೊಬ್ಬರೂ ಸಹಕಾರ ನೀಡಿದಾಗ ಈ ಮಹತ್ ಕಾರ್ಯ ಯಶಸ್ವಿಯಾಗಲಿದೆ ಎಂದು ಮಹಾಸ್ವಾಮೀಜಿ ಹೇಳಿದರು.

ಮುನಿಯಾಲು ಸಂಜೀವಿನಿ ಫಾರ್ಮ್ ಗೋಧಾಮದ ಸಂಸ್ಥಾಪಕ ಡಾ. ಜಿ. ರಾಮಕೃಷ್ಣ ಆಚಾರ್ ಮಾತನಾಡಿ, ಪಾರಂಪರಿಕ ಸಂಪ್ರದಾಯದಂತೆ ಗೋಧಾಮದಲ್ಲಿ ದೊಂದಿ ಬೆಳಕಿನಲ್ಲಿ ಭಕ್ತಿಭಾವಪೂರ್ಣವಾಗಿ “ಪ್ರಕೃತಿಯಿಂದ ಪ್ರಕೃತಿಗೆ” ಎಂಬ ಪರಿಕಲ್ಪನೆಯೊಂದಿಗೆ ಏಕಪವಿತ್ರ ಶ್ರೀಮನ್ನಾಗಮಂಡಲವನ್ನು ಅಭೂತಪೂರ್ವವಾಗಿ ಆಯೋಜಿಸಲಾಗುತ್ತಿದೆ ಎಂದರು.

ಏಕಪವಿತ್ರ ಶ್ರೀಮನ್ನಾಗಮಂಡಲದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಶೆಟ್ಟಿ (ಕಾರ್ಕಳ) ಮಾತನಾಡಿ, ಕೃಷಿ ಹಾಗೂ ಪ್ರಕೃತಿಗೆ ಅವಿಭಾಜ್ಯ ಸಂಬಂಧವಿದೆ. ಪರಿಸರಕ್ಕೆ ಯಾವುದೇ ಧಕ್ಕೆ ಆಗದಂತೆ, ಪ್ರಾಚೀನ ಹಾಗೂ ಪಾರಂಪರಿಕ ಹಿನ್ನೆಲೆಯೊಂದಿಗೆ ನಾಗಮಂಡಲವನ್ನು ಗೋಧಾಮದಲ್ಲಿ ಆಯೋಜಿಸಲಾಗುತ್ತಿದೆ. ಈ ಪವಿತ್ರ ಕಾರ್ಯವನ್ನು ತಪಸ್ಸಿನ ಮೂಲಕ ಡಾ. ಜಿ. ರಾಮಕೃಷ್ಣ ಆಚಾರ್ ಕಾರ್ಯರೂಪಗೊಳಿಸುತ್ತಿದ್ದಾರೆ ಎಂದು ತಿಳಿಸಿದರು.

ವಿಶ್ವಕರ್ಮ ಸಮಾಜದ ಪ್ರಮುಖರಾದ ಶ್ರೀಧರ ಆಚಾರ್ಯ ಮಾತನಾಡಿ, ನಾಗಮಂಡಲದಂತಹ ಪುಣ್ಯ ಕಾರ್ಯವನ್ನು ಡಾ. ಜಿ. ರಾಮಕೃಷ್ಣ ಆಚಾರ್ ಕೈಗೊಂಡಿರುವುದು ಸಮುದಾಯಕ್ಕೆ ಹೆಮ್ಮೆಯ ವಿಷಯ. ಎಲ್ಲರೂ ಸಹಕಾರ ನೀಡಿ ನೈಸರ್ಗಿಕವಾಗಿ ನಡೆಯುವ ಈ ಪವಿತ್ರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.

ಈ ಸಂದರ್ಭದಲ್ಲಿ ಸಂಜೀವಿನಿ ಫಾರ್ಮ್ ಗೋಧಾಮದ ಟ್ರಸ್ಟಿ ಸವಿತಾ ರಾಮಕೃಷ್ಣ ಆಚಾರ್, ಏಕಪವಿತ್ರ ಶ್ರೀಮನ್ನಾಗಮಂಡಲದ ಅಧ್ಯಕ್ಷ ದೇವಿಪ್ರಸಾದ ಶೆಟ್ಟಿ (ಮೂಡಬಿದರೆ), ಬಾರ್ಕೂರು ಎನ್.ಆರ್. ದಾಮೋದರ ಶರ್ಮ, ವಿಶ್ವಕರ್ಮ ಸಮಾಜದ ಮುಖಂಡರು ಸೇರಿದಂತೆ ವಿವಿಧ ಪ್ರಮುಖರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ದಾಮೋದರ ಶರ್ಮ ನಿರೂಪಿಸಿ, ಸ್ವಾಗತಿಸಿದರು.