ಡೈಲಿ ವಾರ್ತೆ: 08/ಜುಲೈ /2024

ಉಡುಪಿಯಲ್ಲಿ ಮುಂದುವರಿದ ಮಳೆ ಆರ್ಭಟ: ಗುಂಡಿಬೈಲು ಪ್ರದೇಶದಲ್ಲಿ ಹಲವು ಮನೆ ಜಲಾವೃತ, ಸಂಚಾರ ಅಸ್ತವ್ಯಸ್ತ – ನಿವಾಸಿಗಳ ರಕ್ಷಣೆ!

ಉಡುಪಿ: ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಗುಂಡಿಬೈಲು ಪ್ರದೇಶ ಜಲಾವೃತಗೊಂಡಿದ್ದು ಸಂಪರ್ಕ ರಸ್ತೆಗಳಿಗೆ ನೀರು ನುಗ್ಗಿದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡಿದೆ.

ಗುಂಡಿಬೈಲು ಪಾಡಿಗಾರು ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು ಇಲ್ಲಿನ ಪಿಜಿ ಕಟ್ಟಡದಲ್ಲಿ ಸಿಲುಕಿದ ವಿದ್ಯಾರ್ಥಿಗಳ ರಕ್ಷಣೆಗೆ ಅಗ್ನಿಶಾಮಕ ದಳ ಧಾವಿಸಿ ರಕ್ಷಣೆ ಮಾಡುತ್ತಿದ್ದು ಈ ಭಾಗದಲ್ಲಿ ಇನ್ನೂ ಕೆಲ ನಾಗರಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು ಅವರನ್ನು ರಕ್ಷಿಸುವ ಕಾರ್ಯ ಅಗ್ನಿಶಾಮಕ ತಂಡ ನಡೆಸುತ್ತಿದೆ.

ಭಾರಿ ಮಳೆಗೆ ರಸ್ತೆ ಜಲಾವೃತಗೊಂಡು ಕಟ್ಟಡದಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ಅಗ್ನಿಶಾಮಕ ತಂಡ ಬೋಟ್ ಮೂಲಕ ರಕ್ಷಣೆ ಮಾಡಿದ್ದು, ಇನ್ನು ಈ ಭಾಗದಲ್ಲಿ ಅನೇಕ ಮನೆಗಳಿದ್ದು ಅಲ್ಲಿ ಸಿಲುಕಿದ್ದವರನ್ನು ರಕ್ಷಣೆ ಮಾಡುವ ಕೆಲಸ ಭರದಿಂದ ಸಾಗುತ್ತಿದೆ.