ಡೈಲಿ ವಾರ್ತೆ: 29/Sep/2024

2024-25 ನೇ ಸಾಲಿನ “ಜಿಲ್ಲಾ ಮಟ್ಟದ ಸರಕಾರಿ ಶಾಲೆಗಳ ಅಭಿವೃದ್ಧಿ ಹರಿಕಾರ ಪ್ರಶಸ್ತಿ ಪ್ರಧಾನ” ಗುರುವಂದನಾ ಕಾರ್ಯಕ್ರಮ
ಸರಕಾರಿ ಶಾಲೆಗಳ ಉಳಿವಿಗೆ ಪ್ರಯತ್ನಿಸಬೇಕು – ಉಡುಪಿ ಜಿಲ್ಲಾ ಸತ್ರ ನ್ಯಾಯಾಧೀಶ ಅಬ್ದುಲ್ ರಹೀಮ್ ಹುಸೇನ್ ಶೇಖ್

ಕೋಟ: ಗುಣಮಟ್ಟದ ಶಿಕ್ಷಣದೊಂದಿಗೆ ಸರಕಾರಿ ಶಾಲೆಗಳು ಉನ್ನತ ಮಟ್ಟ ಕಾಯ್ದುಕೊಳ್ಳಬೇಕು ಆ ಮೂಲಕ ಸರಕಾರಿ ಶಾಲೆಗಳ ಉಳಿವಿಗೆ ಪ್ರಯತ್ನಿಸಬೇಕು ಎಂದು ಉಡುಪಿ ಜಿಲ್ಲಾ ಸತ್ರ ನ್ಯಾಯಾಧೀಶ ಅಬ್ದುಲ್ ರಹೀಮ್ ಹುಸೇನ್ ಶೇಖ್ ಅಭಿಪ್ರಾಯಪಟ್ಟರು.

ಭಾನುವಾರ ಕುಂಭಾಶಿಯ ಆನೆಗುಡ್ಡೆಯ ಶ್ರೀ ವಿನಾಯಕ ಸಭಾಗೃಹದಲ್ಲಿ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ಕೇಂದ್ರ ವೇದಿಕೆ ಉಡುಪಿ ಜಿಲ್ಲೆ ಇವರ ನೇತೃತ್ವದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ಕುಂದಾಪುರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಡುಪಿ ಜಿಲ್ಲೆ ವಕೀಲರ ಸಂಘ, ಬಾರ್ ಅಸೋಸಿಯೇಶನ್ ಕುಂದಾಪುರ, ಗೀತಾ ಹೆಚ್. ಎಸ್. ಎನ್ ಫೌಂಡೇಶನ್ ಕೋಟೇಶ್ವರ, ಶ್ರೀ ಸಿದ್ಧಿವಿನಾಯಕ ದೇವಸ್ಥಾನ, ಆನೆಗುಡ್ಡೆ ಶ್ರೀ ವಿನಾಯಕ ಸಭಾಗೃಹ, ಕುಂಭಾಶಿ,ಮಗು ಮತ್ತು ಕಾನೂನು ಕೇಂದ್ರ, ನ್ಯಾಶನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿರ್ವಸಿಟಿ ಬೆಂಗಳೂರು ಶಿಕ್ಷಕರ ದಿನಾಚರಣೆಯ ಪ್ರಯುಕ್ತ 2024-25 ನೇ ಸಾಲಿನ ಜಿಲ್ಲಾ ಮಟ್ಟದ ಸರಕಾರಿ ಶಾಲೆಗಳ ಅಭಿವೃದ್ಧಿ ಹರಿಕಾರ ಪ್ರಶಸ್ತಿ ಪ್ರಧಾನ ಗುರುವಂದನಾ ಕಾರ್ಯಕ್ರಮ ಹಾಗೂ ಉಡುಪಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಮತ್ತು ಜಿಲ್ಲಾ ಮಟ್ಟದ ಅತ್ಯುತ್ತಮ ಎಸ್.ಡಿ.ಎಂ.ಸಿ. ಪ್ರಶಸ್ತಿ ಪ್ರಧಾನ ಸಮಾರಂಭ, ಮಕ್ಕಳ ಹಕ್ಕುಗಳ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾದದ್ದು ನಾನು ಕೂಡಾ ಶಿಕ್ಷಕನಾಗಿ ಕಾರ್ಯನಿರ್ವಹಿಸಿದ ಅನುಭವ ಇದೆ, ಸಾಮಾಜಿಕ ವ್ಯವಸ್ಥೆಯಲ್ಲಿ ಶಿಕ್ಷಕರ ಜವಾಬ್ದಾರಿ ಅವರ ಕಾರ್ಯನಿರ್ವಹಣೆ ಶ್ರೇಷ್ಠವಾದದ್ದು ಈ ದಿಸೆಯಲ್ಲಿ ಶಿಕ್ಷಕರ ದಿನಾಚರಣೆಯ ಮೂಲಕ ಗುರುಗಳ ಮಹತ್ವವನ್ನು ಅರಿಯುವ ಕೆಲಸ ಪ್ರತಿಯೊಬ್ಬರಲ್ಲೂ ಆಗಬೇಕಿದೆ, ಬೇರೆ ರಾಷ್ಟ್ರಗಳಿಗೆ ಹೊಲಿಸಿದರೆ ನಮ್ಮ ದೇಶ ಗುರು ಪರಂಪರೆ ಹೆಚ್ಚಿನ ಆದ್ಯತೆ ನೀಡುತ್ತದೆ, ಆಗಿನ ಶಿಕ್ಷಣಕ್ಕೆ ಮೌಲ್ಯಾಧಾರಿತ ಶಿಕ್ಷಣ ನಮ್ಮಗೆ ದೊರಕಿದೆ ಆದರೆ ಪ್ರಸ್ತುತ ಶಿಕ್ಷಣ ವ್ಯವಸ್ಥೆ,ಗುರು ಹಿರಿಯರ ತಿಳಿ ಹೇಳುವ ಕಾರ್ಯದಲ್ಲಿ ವ್ಯತ್ಯಾಸಗಳಾಗಿವೆ ಇದರಿಂದ ಯುವ ಸಮುದಾಯ ದಿಕ್ಕು ಬದಲಾಗಿದೆ, ಮೊಬೈಲ್ ತಂತ್ರಜ್ಞಾನದ ಕಾಲಘಟ್ಟದಲ್ಲಿ ಯುವಕರ ದಾರಿ ತಪ್ಪುವಂತಿದೆ ಅದರ ಸದ್ಭಳಕೆ ಬಿಟ್ಟು ದುರ್ಬಳಕೆ ಹೆಚ್ಚಾಗುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿ ಕಿವಿಮಾತು ಹೇಳಿ ಈ ಬಗ್ಗೆ ಪೋಷಕರು ಜಾಗೃತಿ ವಹಿಸುವ ಅಗತ್ಯತೆಯನ್ನು ಒತ್ತಿಹೇಳಿದರು. ಶಿಕ್ಷಣದ ಜತಗೆ ಮಾನಸಿಕ, ದೈಹಿಕ ಕ್ಷಮತೆ ಕಾಪಾಡಿಕೊಳ್ಳುವ ವಿಚಾರವನ್ನು ಸಭೆಯಲ್ಲಿ ಮನದಟ್ಟು ಮಾಡಿದರು.

ಈ ಸಂದರ್ಭದಲ್ಲಿ ಕಾರ್ಕಳದ ನಿವೃತ್ತ ಮುಖ್ಯ ಶಿಕ್ಷಕಿ ಸುಮನಾ ಕಲ್ಯಾ ಇವರಿಗೆ ಗುರುವಂದನೆ ಸಲ್ಲಿಸಲಾಯಿತು.

2024-25ನೇ ಸಾಲಿನ ಜಿಲ್ಲಾ ಮಟ್ಟದ ಸರಕಾರಿ ಶಾಲೆಗಳ ಅಭಿವೃದ್ಧಿ ಹರಿಕಾರ ಪ್ರಶಸ್ತಿಯನ್ನು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ರವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕುಂದರ್ ಅವರು ಮನುಷ್ಯ ಯಾವುದೇ ಕೆಲಸ ಮಾಡುವುದಾದರೂ ತನ್ನ ಆತ್ಮತೃಪ್ತಿಗಾಗಿ ಮಾಡುತ್ತಾನೆ. ನಾವು ಮಾಡುವ ಕೆಲಸ ನಮ್ಮ ಆತ್ಮಕ್ಕೆ ಖುಷಿ ಕೊಡುವಂತೆ ನಾವು ಮಾಡಿದರೆ ಖಂಡಿತ ಜೀವನ ಸಾರ್ಥಕವಾಗುತ್ತದೆ. ಅದರಿಂದ ಸಮಾಜಕ್ಕೂ ಒಳ್ಳೇದಾಗುತ್ತೆ ಎಂದರು. ಮನುಷ್ಯನ ಜೀವನದಲ್ಲಿ ಗುರುಗಳ ಪಾತ್ರದ ಬಗ್ಗೆ ವಿವರಿಸಿದ ಆನಂದ ಕುಂದರ್, ವ್ಯಕ್ತಿಯ ಜೀವನದಲ್ಲಿ ಗುರುಗಳ ಪಾತ್ರ ಅತ್ಯಂತ ಮಹತ್ವವಾದದ್ದು. ವ್ಯಕ್ತಿಯ ಜೀವನವನ್ನು ರೂಪಿಸುವಂತ ಒಳ್ಳೆಯ ಮಾರ್ಗದರ್ಶನ ಮತ್ತು ಅವನ ಭವಿಷ್ಯದಲ್ಲಿ ನೆನಪಿಟ್ಟುಕೊಳ್ಳುವಂತ ವಿಷಯಗಳು ಒಬ್ಬ ಮನುಷ್ಯನಿಗೆ ಸಿಕ್ಕಿದಾಗ ಅವನು ಒಂದು ಸಮಾಜ ಮೆಚ್ಚುವಂತ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ.
ಆದ್ದರಿಂದ ಎಲ್ಲರೂ ಶಿಕ್ಷಕರಿಗೆ ಗೌರವ ಕೊಡುವುದನ್ನು ಕಲಿಯಬೇಕು. ವಿದ್ಯಾರ್ಥಿಗಳು ಮಾಡಿದ ತಪ್ಪನ್ನು ಶಿಕ್ಷಕರು ತಿದ್ದಿ ತೀಡಿ ಬುದ್ದಿ ಹೇಳಿ ಬೆಳೆಸಿದರೆ ಮಕ್ಕಳು ಅರಿತುಕೊಂಡು ಮುಂದೆ ಸಮಾಜದಲ್ಲಿ ಉತ್ತಮರಾಗಿ ಬೆಳೆಯುತ್ತಾರೆ. ಅಂತಹವರು ಖಂಡಿತ ಸಮಾಜ ಘಾತಕರಾಗಿ ಬೆಳೆಯುವುದಿಲ್ಲ ಎಂದು ಆನಂದ್ ಸಿ ಕುಂದರ್ ವಿವರಿಸಿದರು.

ಇದೇ ವೇಳೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕರನ್ನು ಗುರುತಿಸಿಗೌರವಿಸಲಾಯಿತು. ಜತಗೆ ಕುಂಭಾಶಿ,ವಳಕಾಡು, ಗುಜ್ಜಾಡಿ, ನಲ್ಲೂರು, ಗಂಟುಬೀಳು, ಹಂಗಾರಕಟ್ಟೆ ಶಾಲೆಗಳ ಸಮಿತಿಯನ್ನು ಜಿಲ್ಲಾ ಮಟ್ಟದ ಅತ್ಯುತ್ತಮ ಶಾಲಾಭಿವೃದ್ಧಿ ಸಮಿತಿ ಹಾಗೂ ಒರ್ವ ಎಸ್‌ಡಿಎಂಸಿ ಅಧ್ಯಕ್ಷರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶಾಲಾ ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಪ್ರಾಸ್ತಾವನೆ ಸಲ್ಲಿಸಿದರು.
ಮುಖ್ಯ ಅಭ್ಯಾಗತರಾಗಿ ಕುಂದಾಪುರ ಕೋಟ್೯ನ ಹಿರಿಯ ಸಿವಿಲ್ ನ್ಯಾಯಾಧೀಶ ರಾಜು ಎನ್,ಜಿಲ್ಲಾ ಕಾನೂನು ಪ್ರಾಧಿಕಾರದ ಹಿರಿಯ ನ್ಯಾಯಾಧೀಶ ಎಂ. ಪುರುಷೋತ್ತಮ,ಗೀತಾ ಎಚ್.ಎಸ್.ಎನ್ ಫೌಂಡೇಶನ್ ಕೋಟೇಶ್ವರ ಇದರ ಅಧ್ಯಕ್ಷ ಶಂಕರ್ ಐತಾಳ್, ಮಂಗಳೂರಿನ ಪಡಿ ನಿರ್ದೇಶಕ ರೆನ್ನಿ ಡಿಸೋಜ, ಶ್ರೀ ವಿನಾಯಕ ಸಭಾಗೃಹದ ಮುಖ್ಯಸ್ಥ ರವಿರಾಜ ಉಪಾಧ್ಯಾಯ, ಶಾಲಾ ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ ಉಡುಪಿ ಗೌರವ ಸಲಹೆಗಾರೆ ಮಲ್ಲಿಕಾ ಬಾಲಕೃಷ್ಣ ಪೂಜಾರಿ, ಎಸ್ ಡಿಎಂಸಿಸಿಸಿಎಫ್ ಮಂಗಳೂರು ಇದರ ರಾಜ್ಯ ಸಂಚಾಲಕ ಮೋಯಿದ್ದಿನ್ ಕುಟ್ಟಿ ಉಪಸ್ಥಿತರಿದ್ದರು.
ತಾಲೂಕು ಘಟಕದ ಅಧ್ಯಕ್ಷ ಎಸ್ ವಿ ನಾಗರಾಜ್ ಸ್ವಾಗತಿಸಿದರು, ಉಪಾಧ್ಯಕ್ಷ ಉಪಾಧ್ಯಕ್ಷ ಉಷಾ ರಮೇಶ್ ವಂದಿಸಿದರು.
ಉಪಾಧ್ಯಕ್ಷ ರಾಜಶೇಖರ್ ಹಾಗೂ ಸಂಘಟನಾ ಕಾರ್ಯದರ್ಶಿ ಶೋಭಾ ಶಾಂತರಾಜ್ ಕಾರ್ಯಕ್ರಮ ನಿರೂಪಿಸಿದರು.