ಡೈಲಿ ವಾರ್ತೆ: 15/ಫೆ. /2025

ಚಿಕ್ಕಮಗಳೂರು| ಹಿಂದೂ ಮನೆಗಳ ಮೇಲೆ ಕಿಡಿಗೇಡಿ ಯುವಕರಿಂದ ಕಲ್ಲು ತೂರಾಟ

ಚಿಕ್ಕಮಗಳೂರಿನ: ವಿಜಯಪುರ ಬಡಾವಣೆಯಲ್ಲಿ ಹಿಂದೂ ಮನೆಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕೃತ್ಯದಿಂದ ಮನೆಯ ಕಿಟಕಿ ಗಾಜು ಪುಡಿಪುಡಿಯಾಗಿದೆ. ಮಹೇಶ್ ಎಂಬುವರ ಮನೆ ಮೇಲೆ ತಡರಾತ್ರಿ ಕಲ್ಲು ತೂರಲಾಗಿದೆ. ಕಲ್ಲು ತೂರಾಟ ನಡೆಸಿ, ಘೋಷಣೆ ಕೂಗಿ ಯುವಕರು ಪರಾರಿಯಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಮನೆ ಮಾಲೀಕರು ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಸವನಹಳ್ಳಿ ಪೊಲೀಸರು ಕಿಡಿಗೇಡಿಗಳನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ.

ಈ ಸಂಬಂಧ ಚಿಕ್ಕಮಗಳೂರು ಜಿಲ್ಲಾಪೊಲೀಸ್​ ವರಿಷ್ಠಾಧಿಕಾರಿ ವಿಕ್ರಮ್ ಆಮ್ಟೆ ಮಾತನಾಡಿ, ರಾತ್ರಿ ಒಂದು ಮನೆಯ ಮೇಲೆ ಕಲ್ಲು ಎಸೆಯಲಾಗಿದೆ. ಕಲ್ಲು ಎಸೆದು ಯುವಕರು ಪರಾರಿಯಾಗಿದ್ದಾರೆ. ಈ ಸಂಬಂಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ‌ದಾಖಲಿಸಲಾಗಿದೆ. ಕಲ್ಲು ಎಸೆದಿರುವುದು ಯಾರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿ ಆಧರಿಸಿ ತನಿಖೆ ನಡೆಯುತ್ತಿದೆ. ಮನೆಯ ಮೇಲೆ ಒಂದು ಕಲ್ಲು ಬಿದ್ದಿದ್ದು, ಕಿಟಕಿ ಗಾಜು ಹೊಡೆದಿದೆ ಎಂದು ತಿಳಿಸಿದರು.